ಹೂಮನಸ್ಸುಗಳು



ಹೂವಿನಹೊಳೆ ಪ್ರತಿಷ್ಠಾನದ ಹೂಮನಸ್ಸುಗಳು :-

ಯಾವುದೇ ಸಮಾಜಮುಖಿ ಕೆಲಸಗಳನ್ನು ಯಶಸ್ವಿಯಾಗಬೇಕು ಎಂದರೆ ಒಂದಷ್ಟು ಒಳ್ಳೆಯ ಮನಸ್ಸುಗಳ ತಂಡ ಬೇಕಾಗುತ್ತದೆ ಈ ನಿಟ್ಟಿನಲ್ಲಿ ಹೂವಿನಹೊಳೆ ಪ್ರತಿಷ್ಠಾನ ಎನ್ನುವ ಹೂಮನಸ್ಸಿನ ರಥವನ್ನು 28 ಜನರ ತಂಡ ಎಳೆಯುತ್ತಿದೆ .


ಹೂವಿನಹೊಳೆ ಪ್ರತಿಷ್ಠಾನ ಎನ್ನುವ ಪುಟ್ಟ ಕನಸನ್ನು ಕಂಡವರು ನಂದಿ ಜೆ ಹೂವಿನಹೊಳೆ ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದವರು. ವೃತ್ತಿಯಲ್ಲಿ ಭಾರತ ಸರ್ಕಾರದ ಸಿ ಎಸ್ ಸಿ ಯೋಜನೆಯ ಅಡಿಯಲ್ಲಿ ಗ್ರಾಮೀಣ ಮಟ್ಟದ ವಾಣಿಜ್ಯೋದ್ಯಮಿ, ಸಾಮಾಜಿಕವಾಗಿ ತಮ್ಮನು ಸಮಾಜಕ್ಕೆ ಈ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕನ್ನಡ ಕಾರ್ಯಕ್ರಮ ನಿರೂಪಕರಾಗಿ, ಸಿನಿಮಾ ಪ್ರಚಾರಕರಾಗಿ, ಕನ್ನಡಪರ ಹೋರಾಟಗಾರರಾಗಿ, ಎಲ್ಲದಕ್ಕೂ ಮುಖ್ಯವಾಗಿ 2016-2019ರ ಸಾಲಿಗೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಹೂವಿನಹೊಳೆ ಯುವಜನ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಹೂವಿನಹೊಳೆ ಪ್ರತಿಷ್ಠಾನದಲ್ಲಿ ಸಂಸ್ಥಾಪಕ ಅಧ್ಯಕ್ಷರಾಗಿ ಹೂಮನಸ್ಸುಗಳ ಜೊತೆಯಾಗಿದ್ದಾರೆ.


ಹೂವಿನಹೊಳೆ ಪ್ರತಿಷ್ಠಾನ ಎನ್ನುವ ಹೂಮನಸುಗಳ ರಥಕ್ಕೆ ಎರಡನೇ ಸರಾಥಿ ನಾಯ್ಕಲ್ ದೊಡ್ಡಿ ಚಂದ್ರಶೇಖರ್ ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ನಾಯ್ಕಲ್ ದೊಡ್ಡಿ ಗ್ರಾಮದವರು ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಗೂ ರಾಮನಗರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ! ಹೌದು ನಮ್ಮ ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ ನಮ್ಮೊಟ್ಟಿಗೆ ಜೊತೆಯಾಗಿರುವ ಚಂದ್ರು ಒಬ್ಬ ಕವಿ, ಸಮಾಜ ಹಿತಚಿಂತಕ, ಯುವ ಮನಸ್ಸುಗಳನ್ನು ಒಟ್ಟಿಗೆ ನೋಡಬೇಕು, ಸಮಾಜಕ್ಕೆ ಏನಾದರು ಒಳ್ಳೇದು ಮಾಡಬೇಕು ಎನ್ನುವ ತುಡಿತ ಏರುವ ವ್ಯಕ್ತಿ


ವಸಂತ ಬಿ ಈಶ್ವರಗೆರೆ ಈ ಹೆಸರು ಕನ್ನಡ ಮಾಧ್ಯಮ ವಲಯದಲ್ಲಿ ಸದಾ ಪ್ರಚಲಿತ. ಈ ಹಿಂದೆ ಸೂಮಾರು ೧೦ ವರ್ಷಗಳ ಕಾಲ ಉದಯ ನ್ಯೂಸ್ ನಲ್ಲಿ ಕೆಲಸ ಮಾಡಿರುವ ನಮ್ಮ ವಸಂತ್ ಅವರು ಸಮಾಜದ ಆಗುಹೋಗುಗಳ ಬಗ್ಗೆ ಸದಾ ಧ್ವನಿಯಾಗಿ ನಿಲ್ಲುತ್ತಾರೆ, ವಾಚಕರವಾಣಿಯಲ್ಲಿ ವಾರಕ್ಕೆ ಒಮ್ಮೆಯಾದರೂ ಇವರ ಪತ್ರ ಪ್ರಕಟವಾಗುತ್ತದೆ, ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಈಶ್ವರಗೆರೆ ಗ್ರಾಮದವರು ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಇವರು ತನ್ನೂರಿನ ಬಗ್ಗೆ ಅಪಾರ ತುಡಿತವನ್ನು ಹೊಂದಿರುವವರು ಈ ಹಿನ್ನೆಲೆಯಲ್ಲೇ ಹೂವಿನಹೊಳೆ ಪ್ರತಿಷ್ಠಾನದ ಜೊತೆ ಕೈ ಜೋಡಿಸಿ ಕಾರ್ಯಾಧ್ಯಕ್ಷರಾಗಿ ಹೂಮನಸ್ಸುಗಳ ರಥವನ್ನು ಮುನ್ನಡೆಸುತ್ತಿದ್ದರೆ.


ಅನುಪಮ ಎಸ್ ಗೌಡ ಒಬ್ಬ ಒಳ್ಳೆಯ ಕವಯತ್ರಿ ನಗೆಮಲ್ಲಿಗೆ ಅಡಿಬರಹದೊಂದಿಗೆ ಕನ್ನಡ ಕಾವ್ಯವನ್ನು ಕಟ್ಟುವವರು, ಮೂಲತಃ ಮಂಡ್ಯ ಜಿಲ್ಲೆಯವರು, ಬೆಂಗಳೂರಿನ ವೃತ್ತಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಹೂವಿನಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಹೊಸ್ತಿಲಲ್ಲಿ ಜೊತೆಯಾದವರು, ಹೆಣ್ಣು ಮಕ್ಕಳು ಪ್ರಧಾನವಾಗಿ ಸಮಾಜದ ಮುಖ್ಯ ವಾಹಿನಿಯನ್ನು ಮುನ್ನೆಡಸಬೇಕು ಎನ್ನುವ ಆಶಯದೊಂದಿಗೆ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಹತ್ತನೇ ತರಗತಿ ಓದಿದರೆ ಸಾಕು ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳೋಣ ಎನ್ನುವುದು ಬಹುತೇಕ ಪೋಷಕರ ನಿಲುವು, ಇನ್ನು ಕೆಲವರು ಸಂಬಂಧಗಳಿಗೆ ಗಂಟುಬಿದ್ದು ನಮ್ಮ ಮಗಳನ್ನು ನಿಮ್ಮ ಮಗನಿಗೆ ಕೊಡುವುದು ಎನ್ನುವ ನಿಶ್ಚಯ್ವನ್ನು ಚಿಕ್ಕವಯಸ್ಸಿನಲ್ಲೇ ಮಾಡಿರುತ್ತಾರೆ ಅಂಥದೊಂದು ಪೋಷಕರ ಭರವಸೆಗೆ ಬೆಲೆಕೊಟ್ಟು ಹತ್ತನೇ ತರಗತಿ ಫಲಿತಾಂಶದ ದಿನ ಹಸೆಮಣೆ ಏರಿದವರು ನಾಗರತ್ನ ಗೋವಿಂದರಾಜು ಅರ್ಥಾತ್ 18 ರ ಹರೆಯದಲ್ಲೇ ಮದುವೆಯಾದವರು, ಗೃಹಿಣಿಯಾಗಿ ಮನೆಯಲ್ಲಿ ಸುಮ್ಮನೆ ಕೂರದೆ ಗೃಹ ಉಪಯೋಗಿ ಅಲಂಕಾರಿಕ ವಸ್ತುಗಳನ್ನು ಸಿದ್ದಪಡಿಸಿವ ಹವ್ಯಾಸವನ್ನು ಮೈಗೂಡಿಸಿಕೊಂಡು ಪ್ರಸ್ತುತ ಹೂವಿನಹೊಳೆ ಪ್ರತಿಷ್ಠಾನದ ಕೋಶಾಧ್ಯಕ್ಷರಾಗಿ ನಮ್ಮೊಟ್ಟಿಗೆ ಜೊತೆಯಾದ ಮೊದಲ ಮಹಿಳಾ ಮಣಿ.


ಶ್ರೀಧರ್ ಬಿ. ಈಶ್ವರಗೆರೆ ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಈಶ್ವರಗೆರೆಯವರು, ಭ್ರಷ್ಟ ವ್ಯವಸ್ಥೆಯನ್ನು ಬಯಲಿಗೆ ಎಳೆಯುವಲ್ಲಿ ಆರ್ ಟಿ ಐ ಕಾರ್ಯಕರ್ತರಾಗಿ ಅನೇಕ ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ನಮ್ಮ ಕಾರ್ಯಕ್ರಮ ಇದ್ದರು ತಪ್ಪದೆ ಹಾಜರಾಗುವ ಶ್ರೀಧರ್, ಹೂವಿನಹೊಳೆ ಪ್ರತಿಷ್ಠಾನದ ತೀರಾ ಜವಾಬ್ದಾರಿಯುತ ಸ್ಥಾನ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.


ಬೆಂಗಳೂರಿಗೆ ಬರುವ ಬಹುತೇಕ ಯುವಕರ ಕಣ್ಣಲ್ಲಿ ಒಂದು ಕನಸಿರುತ್ತದೆ. ತನ್ನ ಮೂಲವನ್ನು ಬಿಟ್ಟು ಏನನ್ನೋ ಸಾಧಿಸುವ ಸಲುವಾಗಿ ಬೆಂಗಳೂರು ಎಂಬ ಮಹಾನಗಕ್ಕೆ ಬರುತ್ತಿದ್ದೇನೆ ನನ್ನ ಗುರಿಯನ್ನು ನಾನು ಮುಟ್ಟಲೇ ಬೇಕು, ಸಾಧಿಸಲೇ ಬೇಕು ಎನ್ನುವ ಹಠ ಇರುತ್ತದೆ, ಕೆಲವರು ಅರ್ಧಕ್ಕೆ ತಮ್ಮ ಕನಸಿಗೆ ಬೆನ್ನು ತೋರಿಸಿ ಬೆಂಗಳೂರು ಬಿಡುತ್ತಾರೆ ಆದರೆ ಇನ್ನೂ ಕೆಲವರು ಇದ್ದು ಸಾಧಿಸುತ್ತೇನೆ ಎನ್ನುವ ಛಲವನ್ನು ಬಿಡದೆ ಮುನ್ನುಗುತ್ತಾರೆ, ಅಂಥವರಲ್ಲಿ ಮೂಲತಃ ದಾವಣಗೆರೆಯವರಾದ ನಮ್ಮ ಮಂಜು ಎಂ. ದೊಡ್ಡಮನಿ ಪ್ರಮುಖರು. ನಾಲ್ಕು ಪ್ರಕಟಿತ ಕೃತಿಗಳಜೊತೆಯಲ್ಲಿ ‘ಆನೆ ನಡದದ್ದೆ ದಾರಿ’ ಎನ್ನುವಂತೆ ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರರಾಗಿ ಒಳ್ಳೆಯ ಹೆಸರು ಮಾಡುತ್ತಿರುವ ಇವರು 5 ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿನ ಸಾಹಿತ್ಯ ರಚನೆ ಮಾಡಿದ್ದಾರೆ, ಕನ್ನಡ ಮಾಣಿಕ್ಯ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತರಾಗಿದ್ದಾರೆ, ಪ್ರಸ್ತುತ ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ.


ಎಂ.ಟಿ.ಗೋವಿಂದರಾಜು ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಮೊಸರುಕುಂಟೆಯವರು, 1990ರ ದಶಕದಲ್ಲಿ ಬೆಂಗಳೂರಿಗೆ ಬಂದು ಬದುಕನ್ನು ಕಟ್ಟಿಕೊಳ್ಳಲು ಪಟ್ಟಶ್ರಮ ಸಾಮಾನ್ಯದಲ್ಲ ತೀರಾ ಬಡತನದಲ್ಲಿ ಬೆಳೆದು ನೂರಾರು ಜನರಿಗೆ ಅನ್ನ ನೀಡುವ ಹಂತಕ್ಕೆ ತಲುಪಿದ್ದಾರೆ, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್, ಹೂವಿನಹೊಳೆ ಪ್ರತಿಷ್ಠಾನ ಮಾಡುವ ಎಲ್ಲಾ ಕೆಲಸಗಳನ್ನು ಸದಾ ಬೆನ್ನೆಲುಬಾಗಿರುವ ಇವರು ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ.


ಯದುನಂದನ್ ಗೌಡ ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನವರು ವೃತ್ತಿಯಲ್ಲಿ ಕನ್ನಡ ಮಾಣಿಕ್ಯ ಮಾಸ ಪತ್ರಿಕೆಯ ಸುದ್ದಿ ಮತ್ತು ಜಾಹೀರಾತು ವ್ಯವಸ್ಥಾಪಕ. ಸದಾ ಕ್ರಿಯಾಶೀಲವಾಗಿ ಕನ್ನಡಪರ ಹೋರಾಟಗಳ ಧ್ವನಿಯಾಗಿ, ಡಾ. ವಿಷ್ಣು ಸೇನಾ ಸಮಿತಿ ಬೆಂಗಳೂರು ನಗರ ಅಧ್ಯಕ್ಷರಾಗಿಸಹ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ, ರಾಷ್ಟ್ರ ರಾಜಧಾನಿನವದೆಹಲಿಯಲ್ಲಿ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆದ ಡಾ. ವಿಷ್ಣುವರ್ಧನ ರಾಷ್ಟೀಯ ಉತ್ಸವವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಯದುನಂದನ್, ಹೂವಿನಹೊಳೆ ಪ್ರತಿಷ್ಠಾನದ ನೋಂದಣಿಯಾದ ದಿನದಿಂದಲೂ ಸಂಘಟನಾ ಕಾರ್ಯದರ್ಶಿಯಾಗಿ ನಮ್ಮೊಟ್ಟಿಗೆ ಜೊತೆಗಿದ್ದರೆ.


ಗಿರೀಶ್ ಹೆಚ್.ಎನ್. ಮೂಲತ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನವರು ಯುವ ಮನಸ್ಸುಗಳ ತುಡಿತ ಹೇಗಿರುತ್ತೆ ಅಂದ್ರೆ ದೊಡ್ಡ ಬೆಟ್ಟವನ್ನು ತೋರಿಸಿದರೆ ಪುಡಿ ಮಾಡಿ ತರಬೇಕಾ ಎಂದು ಕೇಳುವಂತದ್ದು, ಗಿರೀಶ್ ಕೂಡ ಹಾಗೆ ಎಂತಹದ್ದೇ ಕೆಲಸ ಇರಲಿ ಹಿಂದೆ ಸರಿಯುವುದಿಲ್ಲ ಏನ್ನನ್ನಾದ್ರೂ ಸಾಧಿಸಬೇಕು ಎನ್ನುವ ಛಲಬಿಡದ ಮಲ್ಲ, ಹೂವಿನಹೊಳೆ ಪ್ರತಿಷ್ಠಾನದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ.
ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಕನ್ನಡಿಗರು ಉದ್ಯಮಿಗಳಾಗಬೇಕು ನಾಲ್ಕು ಜನರಿಗೆ ನಾವು ಕೆಲಸ ಕೊಡುವಂತಾಗಬೇಕು ನಾವು ನಮ್ಮ ನೆಲದ್ಲಲಿ ಪರಭಾಷಿಕರ ಆಳ್ವಿಕೆಯಲ್ಲಿ ಇರಬಾರದು ಇದನ್ನು ಅಕ್ಷರಸಹ ನಿಜ ಮಾಡುವ ಮನಸ್ಸಿರುವ ವ್ಯಕ್ತಿ ಹೆಚ್.ಈ. ರಾಘವೇಂದ್ರತನ್ನದೇ ಒಂದು ಸಣ್ಣ ಉದ್ಯಮವನ್ನು ಪ್ರಾರಂಭ ಮಾಡಿ ನಾಲ್ಕು ಜನರಿಗೆ ಕೆಲಸ ಕೊಡುವ ಕಾರ್ಯ ಮಾಡುತ್ತಿದ್ದಾರೆ, ಹೂವಿನಹೊಳೆ ಪ್ರತಿಷ್ಠಾನದ ಎಲ್ಲಾ ಕೆಲಸಗಳಿಗೆ ಸಂಘಟನಾ ಸಂಚಾಲಕರಾಗಿ ಮುಂದೆ ನಿಲ್ಲುತ್ತಾರೆ.


ಶೋಭಾ ಯದುನಂದನ್ ಒಬ್ಬ ವಿದ್ಯಾವಂತ ಗೃಹಿಣಿ ತನ್ನ ಮನೆಯಾಯಿತು ತಾನಾಯ್ತು ಎನ್ನುವ ಹೊತ್ತಿನಲ್ಲಿ ತಾನು ಸಮಾಜಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಎನ್ನುವ ತುಡಿತ ಇರುವರು, ತನ್ನ ಪತಿ ಯದುನಂದನ್ ಅವರು ಹೂವಿನಹೊಳೆ ಪ್ರತಿಷ್ಠಾನದಲ್ಲಿ ಸಂಘಟನಾ ಕಾರ್ಯದಶಿರ್ಯದರೆ ತಾನು ಸಂಘಟನಾ ಸಂಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತೇನೆ ಎನ್ನುತ್ತಾರೆ ಶೋಭಾ.


ನಿಜ ಅರ್ಥದಲ್ಲಿ ಹೂವಿನಹೊಳೆ ಪ್ರತಿಷ್ಠಾನ ಎನ್ನುವ ನಂದಿ ಹೂವಿನಹೊಳೆ ಚಿಂತನೆಗೆ ಹೊಸ ಭರವಸೆ ಕೊಟ್ಟವರು ರಾಘವೇಂದ್ರ ಪದ್ಮಶಾಲಿ, ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯವರು, 2009ರಲ್ಲಿ ಚಿತ್ತಾರದುರ್ಗ ಎನ್ನುವ ಐತಿಹಾಸಿಕ ಚಿತ್ರದುರ್ಗದ ಬಗೆಗಿನ ಮಾಹಿತಿ ವೆಬ್ ತಾಣವನ್ನು ರಚಿದವರು, ಅಲ್ಲಿಂದಲೇ ಕನ್ನಡ ಬಗ್ಗೆಗಿನ ಚಿಂತನೆಗಳನ್ನು ಗಟ್ಟಿಗೊಳಿಸಿದವರು, ಹೂವಿನಹೊಳೆ ಎನ್ನುವ ಪುಟ್ಟ ಗ್ರಾಮದ ಬಗೆಗಿನ ಅಭಿಮಾನವನ್ನು ದುಪ್ಪಟ್ಟು ಮಾಡಿದವರು ಇವರೇ.ಹೂವಿನಹೊಳೆ ಪ್ರತಿಷ್ಠಾನದ ಎಲ್ಲಾ ಕೆಲಸಗಳನ್ನು ಪ್ರೀತಿಯಿಂದ ಹರಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.


ರಾಷ್ಟ್ರಕವಿ ಕುವೆಂಪು ಅವರ ತವರು ಸಹ್ಯಾದ್ರಿ ಮಡಿಲು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಈ ಮಲೆನಾಡಿನ ಪ್ರತಿಭೆ ಟಿ.ಜಿ.ನಂದೀಶ್ ತೀರ್ಥಹಳ್ಳಿ, ಬರಹಗಾರ, ಕವಿ, ಪತ್ರಕರ್ತ, ಕನ್ನಡ ಸಿನಿಮಾ ಪತ್ರಿಕೋದ್ಯಮದಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿರುವಚಿತ್ತಾರ ಸಿನಿಪತ್ರಿಕೆಯ ಉಪಸಂಪಾದಕ, ಹೂವಿನಹೊಳೆ ಪ್ರತಿಷ್ಠಾನ ಎನ್ನುವ ಚಿಂತನೆ ಹುಟ್ಟಿದಾಗಿನಿಂದ ಜೊತೆಯಲ್ಲೇ ಇರುವ ಹೂಮನಸ್ಸಿನ ವ್ಯಕ್ತಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.


ದೇವರಾಜ್ ಗೌಡ ಮುದಿಗೆರೆ. ಮೂಲತ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮುದಿಗೆರೆಯವರು, ಕನ್ನಡ ಸಾಹಿತ್ಯದಲ್ಲಿ ಯುವ ಪೀಳಿಗೆಯನ್ನು ಅತೀ ಹೆಚ್ಚಾಗಿ ಕಾಡುವವರು ಯುವ ಓದುಗ ವಲಯವನ್ನು ತಲುಪಿದವರು ಪೂರ್ಣಚಂದ್ರ ತೇಜಸ್ವಿ ಅವರು ಬಹುಕಾಲ ನೆಲೆಸಿದ್ದು - ಬದುಕು ಕಂಡದ್ದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ. ದೇವರಾಜ್ ಅವರ ಹೆಸರನ್ನು ಯಾರಾದರೂ ಇಂಗ್ಲಿಷ್ ನಲ್ಲಿ ಓದಿದರೆ ಅದು ಮೊದಲು ಗೋಚರಿಸುವುದು ಮೂಡಿಗೆರೆ ಎಂದು ಸಹಜವಾಗಿ ನೆನಪಿಗೆ ಬರುವುದು ತೇಜಸ್ವಿ ಮಾತ್ರ ಹಾಗೆಯೆ ದೇವರಾಜ್ ಕೂಡ ತೇಜಸ್ವಿ ಅವರ ದೊಡ್ಡ ಅಭಿಮಾನಿ ಚಾರಣ ಸುತ್ತಾಟ ಇವರ ದೊಡ್ಡ ಹವ್ಯಾಸ ಇದರೊಟ್ಟಿಗೆ ಹೂವಿನಹೊಳೆ ಪ್ರತಿಷ್ಠಾನದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಮ್ಮನು ಸದಾ ಎಚ್ಚರಿಸುವ ಕೆಲಸ ಮಾಡುತ್ತಾರೆ.


ಮಂಜು ಶಿವಣ್ಣ ಸಾಹಿತ್ಯದ ಒಲವಿರುವ ವ್ಯಕ್ತಿ, ಕನ್ನಡ ನಾಡು ನುಡಿಗೆ ಎಲ್ಲರ ಕೊಡುಗೆ ಎಷ್ಟು ಮುಖ್ಯವೋ ಅದನ್ನು ಓದಿ ಪ್ರೋತ್ಸಾಹಿಸುವವರು ಅಷ್ಟೇ ಮುಖ್ಯ, ಈ ನಿಟ್ಟಿನಲ್ಲಿ ಮಂಜು ಒಬ್ಬ ಒಳ್ಳೆಯ ಓದುಗ ಹೂವಿನಹೊಳೆ ಪ್ರತಿಷ್ಠಾನ ಮಾಡುವ ಎಲ್ಲಾ ಕೆಲಸಗಳನ್ನು ಸದಾ ಒಳ್ಳೇದನ್ನು ಕಾಣುವ ಮನಸ್ಸು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಮ್ಮನು ಪ್ರೋತ್ಸಾಹಿಸುತ್ತಾರೆ.



ಸುರೇಶ್ ಪೂಜಾರಿ ವೃತ್ತಿಯಲ್ಲಿ ಖಾಸಗಿ ಸಂಸ್ಥೆ ಒಂದರಲ್ಲಿ ಸಾಫ್ಟವೆರ್ ಇಂಜಿನಿಯರ್, ಸದಾ ಸಮಾಜ ಮುಖಿ ಚಿಂತನೆಗಳೊಂದಿಗೆ ನಮ್ಮ ಜೊತೆ ನಿಲ್ಲುತ್ತಾರೆ, ಹೂವಿನಹೊಳೆ ಪ್ರತಿಷ್ಠಾನ ಮಾಡುವ ಶೈಕ್ಷಣಿಕ ಕಾರ್ಯಗಳಿಗೆ ನೆರವಾಗುತ್ತಾರೆ, ನಮ್ಮ ತಂಡದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.


ಶಶಿ ಬಿ ಈಶ್ವರಗೆರೆ ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನವರು ವೃತ್ತಿಯಲ್ಲಿ ವೃತ್ತಿ ಶಿಕ್ಷಣ ಸಂಸ್ಥೆ ಒಂದ ರಲ್ಲಿ ಟ್ರೈನಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಮಾಜದ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಹೊಂದಿದ್ದಾರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ಮಾಡುವ ಮನಸ್ಸು ಒಂದಿರುವ ಶಶಿ ಕುಮಾರ್ ಹೂವಿನಹೊಳೆ ಪ್ರತಿಷ್ಠಾನದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.


ದರ್ಶನ್ ಎಂ ದೊಡ್ಡಮನಿ ಮೂಲತಃ ದಾವಣಗೆರೆಯವರು ಬೆಣ್ಣೆ ದೋಸೆಯಷ್ಟೇ ಮೃದು ಸ್ವಭಾವದ ವ್ಯಕ್ತಿ, ಸಕಲ ಕಾಲ ವಲ್ಲಭ ಈ ವ್ಯಕ್ತಿ, ತನ್ನ ಅಪರಿಮಿತವಾದ ಕಲಾತ್ಮಕ ಕ್ರಿಯಾಶೀಲತೆಯಿಂದ ಸದಾ ಏನನ್ನನಾದರೂ ಮಾಡುತ್ತಲೇ ಇರುತ್ತಾರೆ, ಪ್ರಸ್ತುತ ಸುದ್ದಿ ಮಾಧ್ಯಮ ಒಂದರಲ್ಲಿ ಎಡಿಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ, ಹೂವಿನಹೊಳೆ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯಸದಸ್ಯರು.


ಸಮಾಜಕ್ಕೆ ಏನನ್ನೇ ಮಾಡಬೇಕು ಅಂದರು ಮೊದಲು ಮನೆಯವರ ಬೆಂಬಲ - ಸಹಕಾರ ಅತ್ಯಗತ್ಯ ಈ ನಿಟ್ಟಿನಲ್ಲಿ ಹೂವಿನಹೊಳೆ ಪ್ರತಿಷ್ಠಾನದ ಕನಸು ಹೊತ್ತ ನಂದಿ ಜೆ ಹೂವಿನಹೊಳೆ ಅವರಿಗೆ ಸದಾ ಸಾಥ್ ಕೊಡುವ ಅವರ ಸಹೋದರಿ ಚೈತ್ರ ಜೆ ಹೂವಿನಹೊಳೆ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.


ಹೂವಿನಹೊಳೆ ಎನ್ನುವುದು ಈ ಹಿಂದೆ ಹೇಳಿದ ಹಾಗೆ ಒಂದು ಸುಂದರವಾದ ಪುಟ್ಟ ಗ್ರಾಮದ ಹೆಸರು ಇಂತಹ ಗ್ರಾಮದ ಪ್ರತಿ ಆಗುಹೋಗುಗಳಲ್ಲಿ ಗ್ರಾಮದ ಚುನಾಯಿತ ಪ್ರತಿನಿಧಿಗಳ ಪಾತ್ರ ಬಹು ಮುಖ್ಯ ಈ ನಿಟ್ಟಿನಲ್ಲಿ ಹೂವಿನಹೊಳೆ ಪ್ರತಿಷ್ಠಾನ ಈಶ್ವರಗೆರೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರನ್ನು, ಹೂವಿನಹೊಳೆ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರನ್ನು, ಹೂವಿನಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರನ್ನು ಗೌರವ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ.


ಪ್ರಸ್ತುತ ಈಶ್ವರಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ ಜುಂಜ ನಾಯಕ
ಹೂವಿನಹೊಳೆ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಏಕಾಂತಪ್ಪ
ಹೂವಿನಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಇಂದ್ರೇಶ್ ಅವರುಗಳು ಗೌರವ ಸದಸ್ಯರುಗಳಾಗಿರುತ್ತಾರೆ.
ಒಂದು ಗ್ರಾಮ ಅಭಿವೃದ್ಧಿ ಯಾಗಬೇಕು ಎಂದರೆ ಅಲ್ಲಿನ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಮತ್ತು ಸಹಕಾರ ಬಹುಮುಖ್ಯ ಈ ಹಿನ್ನೆಲೆಯಲ್ಲಿ ಹೂವಿನಹೊಳೆ ಗ್ರಾಮದ ಸಂಘ ಸಂಸ್ಥೆಗಳನ್ನು ಗೌರವ ಸದಸ್ಯತ್ವನ್ನು ನೀಡಲಾಗಿದೆ.
1.ವಾಲ್ಮೀಕಿ ಯುವಕ ಸಂಘ, 2.ಕನಕ ಯುವಕ ಸಂಘ, 3.ಭೋವಿ ಯುವಕ ಸಂಘ,
4. ಬಿ ಆರ್. ಅಂಬೇಡ್ಕರ್ ಯುವಕ ಸಂಘ, 5.ಮಾರುತಿ ಯುವಕ ಸಂಘ 6. ಸ್ವಾಮಿ ವಿವೇಕಾನಂದ ಯುವಕ ಸಂಘ.